17 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ: ಇಲ್ಲಿದೆ ಲಿಸ್ಟ್
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ 2025ಕ್ಕೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ವಿವಿಧ ಕ್ರೀಡಾ ವಿಭಾಗಗಳ 17 ಕ್ರೀಡಾಪಟುಗಳನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆದರೆ ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಯಾವುದೇ ಕ್ರೀಡಾಪಟುವನ್ನು ಆಯ್ಕೆ ಮಾಡಲಾಗಿಲ್ಲ.
2014ರ ಬಳಿಕ ಇದೇ ಮೊದಲ ಬಾರಿಗೆ ಖೇಲ್ ರತ್ನ ಪ್ರಶಸ್ತಿಗೆ ಯಾವುದೇ ಕ್ರೀಡಾಪಟುವಿನ ಹೆಸರನ್ನು ಪ್ರಕಟಿಸದಿರುವುದು ವಿಶೇಷವಾಗಿದೆ. ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ನೇತೃತ್ವದ ಆಯ್ಕೆ ಸಮಿತಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ.
ಅರುಮೈನಾಯಗಂಗೆ ಜೀವಮಾನ ಸಾಧನೆ ಅರ್ಜುನ ಪ್ರಶಸ್ತಿ :
1962ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಭಾರತ ಫುಟ್ಬಾಲ್ ತಂಡದ ಸದಸ್ಯರಾಗಿದ್ದ I. ಅರುಮೈನಾಯಗಂ ಅವರಿಗೆ ಈ ವರ್ಷದ ಅರ್ಜುನ ಪ್ರಶಸ್ತಿ–ಜೀವಮಾನ ಸಾಧನೆ ಗೌರವ ನೀಡಲಾಗಿದೆ.
ಅರ್ಜುನ ಪ್ರಶಸ್ತಿ 2025: 17 ವಿಜೇತರು
| ಕ್ರೀಡಾಪಟು | ಕ್ರೀಡೆ |
|---|---|
| ತೇಜಸ್ವಿನ್ ಶಂಕರ್ | ಅಥ್ಲೆಟಿಕ್ಸ್ |
| ಮೊಹಮ್ಮದ್ ಅಜ್ಮಲ್ ವಿ. | ಅಥ್ಲೆಟಿಕ್ಸ್ |
| ಪ್ರಿಯಾಂಕಾ ಗೋಸ್ವಾಮಿ | ಅಥ್ಲೆಟಿಕ್ಸ್ |
| ಟ್ರೀಸಾ ಜಾಲಿ | ಬ್ಯಾಡ್ಮಿಂಟನ್ |
| ಪುಲ್ಲೇಲ ಗಾಯಕತ್ರಿ ಗೋಪಿಚಂದ್ | ಬ್ಯಾಡ್ಮಿಂಟನ್ |
| ನರೇಂದ್ರ ಬರ್ವಾಲ್ | ಬಾಕ್ಸಿಂಗ್ |
| ವಿದಿತ್ ಸಂತೋಷ್ ಗುಜರಾತಿ | ಚೆಸ್ |
| ದಿವ್ಯಾ ಜಿತೇಂದ್ರ ದೇಶಮುಖ್ | ಚೆಸ್ |
| ಧನುಷ್ ಶ್ರೀಕಾಂತ್ | ಡೆಫ್ ಶೂಟಿಂಗ್ |
| ಲಾಲ್ರೆಮ್ಸಿಯಾಮಿ | ಹಾಕಿ |
| ರಾಜ್ಕುಮಾರ್ ಪಾಲ್ | ಹಾಕಿ |
| ಸುರ್ಜೀತ್ ಸಿಂಗ್ | ಕಬಡ್ಡಿ |
| ಪೂಜಾ ಕಜ್ಲಾ | ಕಬಡ್ಡಿ |
| ರುದ್ರಾಂಶ್ ಖಂಡೇಲ್ವಾಲ್ | ಪ್ಯಾರಾ ಶೂಟಿಂಗ್ |
| ಏಕ್ತಾ ಭ್ಯಾನ್ | ಪ್ಯಾರಾ ಅಥ್ಲೆಟಿಕ್ಸ್ |
| ಅರವಿಂದ್ ಸಿಂಗ್ | ರೋಯಿಂಗ್ |
| ಅಖಿಲ್ ಶಿಯೋರನ್ | ಶೂಟಿಂಗ್ |
5 ಕೋಚ್ಗಳಿಗೆ ದ್ರೋಣಾಚಾರ್ಯ ಪ್ರಶಸ್ತಿ :
ಸಾಮಾನ್ಯ ವಿಭಾಗ:
*ಪರ್ವೀರ್ ಸಿಂಗ್ – ಅಥ್ಲೆಟಿಕ್ಸ್
*ಛೋಟೇ ಲಾಲ್ ಯಾದವ್ – ಬಾಕ್ಸಿಂಗ್
*ನೇಹಾ ನಂದಕುಮಾರ್ ಚವಾಣ್ – ಶೂಟಿಂಗ್
ಜೀವಮಾನ ಸಾಧನೆ ವಿಭಾಗ:
*ಧರ್ಮೇಂದ್ರ ಸಿಂಗ್ ಯಾದವ್ – ಬಾಕ್ಸಿಂಗ್
*ವೀರೇಂದ್ರ ಕುಮಾರ್ – ಕುಸ್ತಿ
ಸಾಮಾನ್ಯ ವಿಭಾಗದ ದ್ರೋಣಾಚಾರ್ಯ ಪ್ರಶಸ್ತಿಗೆ ₹10 ಲಕ್ಷ, ಜೀವಮಾನ ಸಾಧನೆ ವಿಭಾಗಕ್ಕೆ ₹15 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.
ಆರ್ಮಿ ಪ್ಯಾರಾಲಿಂಪಿಕ್ ನೋಡ್ಗೆ ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹ ಪ್ರಶಸ್ತಿ :
ಕ್ರೀಡೆಯ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹ ಪ್ರಶಸ್ತಿಯನ್ನು ಆರ್ಮಿ ಪ್ಯಾರಾಲಿಂಪಿಕ್ ನೋಡ್, ಪುಣೆಗೆ ನೀಡಲಾಗಿದೆ.
ಖೇಲ್ ರತ್ನ ಪ್ರಶಸ್ತಿ ಬಗ್ಗೆ :
ಹಿಂದಿನ ನಾಲ್ಕು ವರ್ಷಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತದೆ. 1991-92ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಹೆಸರಿನಲ್ಲಿ ಆರಂಭವಾದ ಈ ಪ್ರಶಸ್ತಿಯನ್ನು 2021ರಲ್ಲಿ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಅವರ ಗೌರವಾರ್ಥವಾಗಿ ಮರುನಾಮಕರಣ ಮಾಡಲಾಯಿತು. ಪ್ರಶಸ್ತಿ ಮೊತ್ತವನ್ನು ₹7.5 ಲಕ್ಷದಿಂದ ₹25 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಅರ್ಜುನ ಪ್ರಶಸ್ತಿ ಬಗ್ಗೆ :
ಅರ್ಜುನ ಪ್ರಶಸ್ತಿಯನ್ನು 1961ರಲ್ಲಿ ಸ್ಥಾಪಿಸಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸತತ ಉತ್ತಮ ಸಾಧನೆ, ನಾಯಕತ್ವ, ಕ್ರೀಡಾಸ್ಫೂರ್ತಿ ಮತ್ತು ಶಿಸ್ತು ಪ್ರದರ್ಶಿಸಿದ ಕ್ರೀಡಾಪಟುಗಳಿಗೆ ನೀಡಲಾಗುತ್ತದೆ. ಪ್ರಶಸ್ತಿಯೊಂದಿಗೆ ₹15 ಲಕ್ಷ ನಗದು ಬಹುಮಾನವೂ ದೊರೆಯುತ್ತದೆ.

